Monday 22 July 2013


ಅಹಂಕಾರ 

ಮಸಣದಾ ದಾರಿ 
ಕಾಯುತಿರುವುದು ನಿನ್ನನ್ನು 
ಬಿಟ್ಟು ಹೊರಡು 
ನೀ ಬೇಡವಾದ ದೇಹವನ್ನು ತೊರೆದು 
------------------------------------------------------------------------------
ನೆನಪು 

ಮತ್ತೆ ಮತ್ತೆ ದೂರಾದರೂ ನಿನ್ನನ್ನು 
ಬಿಡದೆ ಹಿಡಿದಿದ್ದೆ ನಾನು 
ಎಷ್ಟಾದರೂ ಕಾಲ ಕಾಲವೇ ಅಲ್ಲವೇ 
ಒಮ್ಮೆ ನಾನೇ ಕಳೆದು ಹೋಗುವೆನು  


----------------------------------------------------------------

ಸಾಗರದ ಹರಿವಿನಲ್ಲಿ 
ಕಳೆದುಹೋದವು ನನ್ನವೇ ದುಃಖಗಳು 
ಹೇಳದೆ ಕುಳಿತರು 
ಸೆಳೆದು ಬಿಟ್ಟವು
ಚಿಮ್ಮಿ ಬೆಳೆದ ಅಲೆಗಳಲ್ಲಿ


-----------------------------------------------------------------------------

ದೇವರ ಮಡಿಲಿಗೆರಲು
ಹರ್ಷಿಸಿದ್ದವು ನಾಲ್ಕಾರು ಹೂಗಳು
ಕಿತ್ತು ಪೊಣಿಸಿ ಸುತ್ತಿದಳು ಅಮ್ಮ
ದೇವರಂತಹ ತನ್ನ ಕಂದನ ಮುಡಿಗೆ

Thursday 6 June 2013

ಸ್ಮಶಾನ ಮೌನ







"ಹೇ , ಇದು ನನ್ನ ಜಾಗ, ಇಲ್ಲಿ ಯಾಕೆ ಗೀಚುತ್ತಿದ್ದಿಯಾ??"
ಗಡಸು ದ್ವನಿ ಬಂದತ್ತ ತಿರುಗಿದಳು ಭಾವನ....
ಎದುರಿಗೆ ಹರ್ಷಿತ ನಿಂತಿದ್ದಳು...
ಸುತ್ತಲು ತಿರುಗಿ ತಾನೇನು ಅವಳು ಆಡುತಿದ್ದ ಜಾಗದಲ್ಲಿ ಕುಂಟೆಬಿಲ್ಲೆ ಗೀಚುತ್ತಿರಲಿಲ್ಲ ಎಂಬುದು ಖಾತರಿ ಮಾಡಿಕೊಂಡಳು..
ಪ್ರಶ್ನೆ ಮಾಡಿದವಳ ಮುಖದಲ್ಲಿ ಕೋಪ ಅಡಗಿತ್ತು...
"
ನೋಡು, ನೀನು ಆಡುತಿದ್ದ ಜಾಗದಲ್ಲಿ ನಾನು ಆಡುತ್ತಿಲ್ಲ .. ನಿನ್ನ ಜಾಗ ಅದು" ಎಂದು ಬೆಟ್ಟು ಮಾಡಿ ದೂರದಲ್ಲಿ ಮತ್ತೊಂದು ಜಾಗ ತೋರಿಸಿದಳು...
ಹರ್ಷಿತಾ "ಇರಬಹುದು.. ನಾನು ನಿನ್ನೆ ಅಲ್ಲಿ ಆಡಿದ್ದೆ .. ಇಂದು ಇಲ್ಲಿ ಆಡುತ್ತೇನೆ" ಎಂದು ಜಗಳಕ್ಕೆ ತಯಾರಿ ನಡೆಸೆ ಬಂದಿದ್ದಳು.. ಏಕೋ ಇದು ಅವಳ ಅಸಭ್ಯ ವರ್ತನೆಯೆಂದು ಕಂಡಿತು ಭಾವನಾಳಿಗೆ ... ಮಾತಿನಲ್ಲಿ ಹಿಂದೆ ಸರಿಯಲಿಲ್ಲ ...
ಕೊನೆಗೆ ಹರ್ಷಿತಾ ಕೋಪ ತಾಳಲಾಗದೆ, ಮಾತಿನಲ್ಲಿ ಗೆಲ್ಲಲಾಗದೆ ಭಾವನಾಳ ಗಲ್ಲ ಹಿಡಿದು "ಹೇ , ಏನೇ .... ಬೆಳಗ್ಗೆ ಗಣಿತದ ಮೇಸ್ಟ್ರು ನಿನ್ನ ತರಗತಿಯಲ್ಲಿ ಹೊಗಳಿದರು ಅಂತ ಉಬ್ಬಿ ಹೋಗಿದ್ಯಾ?" ಎಂದು ಮೂತಿ ತಿವಿದು ಗಲ್ಲ ತಳ್ಳಿ "ಮಧ್ಯಾಹನ್ನ ತರಗತಿಯಲ್ಲಿ ನೋಡಿಕೊಳ್ಳುತ್ತೇನೆ" ಎಂದು ಎಚ್ಚರಿಕೆಯನಿತ್ತು ಮುಂದೆ ಸಾಗಿದಳು....

ಬೆಳಗ್ಗೆ ಗಣಿತದ ತರಗತಿಯಲಿ ಮೇಸ್ಟ್ರು ಮೊದಲ ಕಿರುಪರೀಕ್ಷೆಯ ಅಂಕಗಳನ್ನ ಹೇಳಿದ್ದರು .. ಭಾವನಾಳಿಗೆ ಪೂರ್ಣ ಅಂಕಗಳು ದೊರೆತ್ತಿದ್ದವು.. ಹರ್ಷಿತಾಳಿಗೆ ಒಂದು ಅಂಕ ಕಡಿಮೆ ದೊರೆತಿತ್ತು.... ಮೇಸ್ಟ್ರು ತರಗತಿಯಲ್ಲಿ ಭಾವನಾಳನ್ನು ನಿಲ್ಲಿಸಿ ಅಭಿನಂದಿಸಿದ್ದರು... ಇದು ಹರ್ಷಿತಾಳ ಕೋಪಕ್ಕೆ ಕಾರಣವಾಗಿತ್ತು.... ಮತ್ತು ತರಗತಿಯ ನಾಯಕಿಯಾಗಿದ್ದ ಅವಳಿಗೆ ಅವಮಾನಕರ ಘಟನೆ ಎನಿಸಿತು.... 

ಮಧ್ಯಾಹ್ನ ಊಟದ ಸಮಯ ಮುಗಿಸಿ ಎಲ್ಲ ಮಕ್ಕಳು ತರಗತಿಗೆ ಹಿಂತಿರುಗಿದರು.... ವಿಜ್ಞಾನ ತರಗತಿಯಲ್ಲಿ ಮೇಸ್ಟ್ರು ಎಲ್ಲರಿಗು ಪ್ರಶ್ನೆ ಕೇಳುವಂತೆ ತರಗತಿಯ ನಾಯಕಿಯಾದ ಹರ್ಷಿತಾಳಿಗೆ ಒಪ್ಪಿಸಿದರು.. ಹೇಳದೆ ಇದ್ದವರಿಗೆ ಬೆತ್ತದ ಏಟುಗಳು ಎಂದು ವಿಧಿಸಲಾಗಿತ್ತು...
ಒಂದು ಕಡೆಯಿಂದ ಪ್ರಶ್ನೆ ಕೇಳುತ್ತ ಬಂದವಳು ಭಾವನಾಳ ಬಳಿಗೆ ಬಂದಾಗ ಇದೇ ಸರಿಯಾದ ಸಮಯ ಕೋಪ ತಿರಿಸಿಕೊಳ್ಳಲು ಎಂದು ಪುಸ್ತಕ ಎಲ್ಲ ಹುಡುಕಿ ಕಷ್ಟದ ಮತ್ತು ಅವಳಿಗೆ ಉತ್ತರಿಸಲಾಗದಂತಹ ಪ್ರಶ್ನೆಯನ್ನು ಕೇಳಿದಳು... ಉತ್ತರಿಸಲು ತಡವರಿಸಿದ ಭಾವನಾಳನ್ನು ಪ್ರಶ್ನೆಗೆ ಉತ್ತರ ಹೇಳಲಿಲ್ಲ ಎಂದು ಮೇಷ್ಟ್ರ ಹತ್ತಿರ ಕಳಿಸಿದಳು...
ಹಸಿ ಬೆತ್ತ ಹಿಡಿದು ಕಾಯುತ್ತಿದ್ದ ಮೇಷ್ಟ್ರಿಗೆ ಬೆತ್ತಕ್ಕೆ ಬಲಿಕೊಡುವ ಆಸೆ ಇದ್ದಂತೆ ಕಾಣುತ್ತಿದ್ದರು...
ಏನನ್ನೋ ಹೇಳಲು ತಡವರಿಸುತ್ತಿದ್ದ ಭಾವನಾಳ ಮಾತನ್ನು ಆಲಿಸದೆ ಎರಡು ಕೈಗಳಿಗೆ ಬೀಸಿ ಹೊಡೆದರು... ಚೀರಿದ ಶಬ್ದವು ಅಟ್ಟಹಾಸ ವಿಕೃತಿಯಲ್ಲಿ ಯಾರಿಗೂ ಕೇಳದಂತಾಯಿತು.... ಬೆತ್ತದ ಹೊಡೆತದ ನೋವಿಗಿಂತ ತಪ್ಪೇ ಮಾಡದೆ ಮತ್ತೊಬ್ಬಳ ಕೋಪಕ್ಕೆ ಬಲಿಯಾಗಿ ಶಿಕ್ಷೆ ಅನುಭವಿಸಿದ್ದೇ ಬಹಳ ನೋವಾಗಿತ್ತು......
ತಕ್ಷಣ ಅಮ್ಮನ ನೆನಪಾಯಿತು.. ಮನೆಗೆ ಹೋದ ತಕ್ಷಣ ಅಮ್ಮನ ಹತ್ರ ಹೇಳಿಕೊಂಡು ಹಗುರಾಗಬೇಕೇಂಬ ಹಂಬಲದಿಂದ ಮನೆಯತ್ತ ಸಾಗಿದಳು...
ಮನೆಯ ಬಾಗಿಲು ತೆರೆದಿತ್ತು... ಭಯದಿಂದಲೇ ಒಳಗೆ ಹೋದಳು... ದಿನವೂ ಕೇಳುತ್ತಿದ್ದ ಅಮ್ಮನ ಕಾಲ್ಗೆಜ್ಜೆಯ ದ್ವನಿ, ಪಾತ್ರೆ ತೊಳೆಯುವಾಗ ಮಾಡುತ್ತಿದ್ದ ಕೈ ಬಳೆಯ ಸದ್ದು ಕೇಳಿ ಬರಲಿಲ್ಲ..... !!
ಹಾಗೆ... ಮುಂದೆ ಸಾಗಿದ ಭಾವನಾಳಿಗೆ ಮೂಲೆಯಲ್ಲಿ ಒಂದಷ್ಟು ಒಡೆದು ಬಿದ್ದಿದ್ದ ಅಮ್ಮನ ಕೈಬಳೆಯ ಗಾಜುಗಳು ಕಂಡವು...
ಅನುಮಾನ ಮತ್ತು ಭಯದಿಂದಲೇ ಒಳಕೋಣೆಗೆ ಹೋದ ಭಾವನಾಳಿಗೆ ಕಂಡಿದ್ದು ಮಂಚದ ಮೇಲೆ ಅಳುತ್ತ ಮಲಗಿದ್ದ ಅಮ್ಮ...
ಮಂಚವೇರಿ ಅಮ್ಮನ ಪಕ್ಕ ಕುಳಿತಳು....
ಹೌದು ಅಮ್ಮ ಅಳುತಿದ್ದಳು.. ಜೋರಾಗಿ ಅಳುತಿದ್ದಳು.... ಹಾಗೆ ಭಾವನಾಳ ದೃಷ್ಟಿ ಅಮ್ಮನ ಕೈಗಳ ಹತ್ತಿರ ಹೋಯಿತು.... ಅಮ್ಮನ ಕೈಯಲ್ಲಿ ಗಾಯವಾಗಿತ್ತು...
ಗಾಜಿನ ಬಳೆಗಳಿಂದ ಗೀಚಿ ರಕ್ತದ ಕಲೆ ಮೂಡಿತ್ತು... ಕೆಂಪಾದ ಅಮ್ಮನ ತುಟಿಯು ಊದಿತ್ತು.... ಕಣ್ಣುಗಳು ಅತ್ತು ಅತ್ತು ಉದಿದ್ದವು...
ಅಮ್ಮನ ಸ್ಥಿತಿಗೆ ಕಾರಣ ತಿಳಿಯಿತು...
ಹೌದು, ಇದು ಅಪ್ಪನ ಕೆಲಸ ಎಂದು ಅರ್ಥವಾಗಲು ಸಮಯ ಹಿಡಿಯಲ್ಲಿಲ್ಲ.. ಬೆಳಗ್ಗೆ ನಡೆದಿದ್ದ ಜಗಳದಲ್ಲಿ ಅಪ್ಪ ಅಮ್ಮನಿಗೆ ಹೊಡೆದಿದ್ದ... ಅಪ್ಪನ ಮಾತು ಕೇಳದೆ ಇದ್ದಾಗ ಕೋಪದಲ್ಲಿ ಮಾಡುವ ಕೆಲಸ ಇಂದು ಕಣ್ ಮುಂದೆ ಮೂಡಿತ್ತು....
ತನ್ನ ಸಂತೋಷ- ದುಃಖಗಳನ್ನು ತೋಡಿಕೊಳ್ಳುವದನ್ನ ಮಾತ್ರ ಗೊತ್ತಿದ್ದ ಭಾವನಾಳಿಗೆ ಅಮ್ಮನ ದುಃಖವನ್ನ ಅರಿತುಕೊಳ್ಳುವ ಶಕ್ತಿ ಇರಲಿಲ್ಲ...
ತನ್ನ ಪುಟ್ಟ ಕೈಗಳಿಂದ ಅವಳ ಗಾಯದ ಮೇಲೆ ಒಮ್ಮೆ ಕೈಯಾಡಿಸಿದಳು... ತನಗೆ ತಿಳಿದಂತೆ ಹತ್ತಿಯಿಂದ ರಕ್ತ ಒರೆಸಿದಳು.. ತನೆಗೆ ತಿಳಿದ ಮುಗ್ದ ಭಾವದಲ್ಲೇ ಅಮ್ಮನಿಗೆ ಒಂದಷ್ಟು ಸಮಾದಾನ ಮಾಡಿದಳು...
ಎಲ್ಲೋ ಭಾವನಾಳ ಮನಸಲ್ಲಿ ಅಡಗಿದ್ದ ಒಂದಷ್ಟು ದುಃಖಕ್ಕೆ ಮತ್ತೊಂದಸ್ಟು ದುಃಖ ಬಂದು ಸೇರಿತ್ತು....
ಶತ್ರುವಲ್ಲದ ಅಪ್ಪ... ಸ್ನೇಹಿತೆಯಲ್ಲದ ಅಮ್ಮ ಇಬ್ಬರಲ್ಲೂ ತುಂಬಿದ್ದ ಅವರದೇ ಒಂದಷ್ಟು ಜಗಳದಲ್ಲಿ ತನ್ನ ಮಾತಿಗೆ ಜಾಗವಿಲ್ಲವೆಂದನಿಸಿತು ಭಾವನಾಳಿಗೆ... 

ಮನೆಯ "ಸ್ಮಶಾನ ಮೌನ"ದಲ್ಲಿ ಜೀವಂತ ದುಃಖಕ್ಕೆ ಒಂದು ಗೋರಿ ಕಟ್ಟಿ ಸುಮ್ಮನಾದಳು
....

Saturday 18 May 2013

ಇದ್ದ ಒಂದಷ್ಟು ಆಸೆಗಳ ಕಳೆದುಕೊಂಡೆ 
ಏನೂ ಇಲ್ಲವೆಂಬ ಅರ್ಥದಲಿ 
ಮತ್ತೆ ಹುಡುಕುವುದರಲ್ಲಿ ಅರ್ಥವಿರಲಿಲ್ಲ 
ಅದರೂ ಬಿಡದೆ ಕಾಡುತಿತ್ತು
ಅದರ ಹೆಜ್ಜೆ ಸೆಳೆತ

ಕಣ್ಣೀರು 


ನೀನೆ ಸರಿ ಗೆಳತಿ 
ಮತ್ತೊಬ್ಬರ ಕಣ್ಣ ಹನಿಯ ಭಾಷೆ ಅರ್ಥೈಸುವೆ
ಚದುರಿ ಹೊರ ಬಿದ್ದೆ 
ಅವಳ ಕಣ್ಣ ಹನಿಗೆ ಜೊತೆಗೂಡಿಸಲು 
ಯಾರ ಅಪ್ಪಣೆಗೂ ಕಾಯದಂತೆ


ಹೆಜ್ಜೆ ನೆನಪು

ಹರಿದು ಹಂಚಿಕೊಂಡಿದ್ದರು
ಅವನ ಜೀವನವ 
ಕೂಡಿಕೊಳ್ಳಲ್ಲಿಲ್ಲವೆಂದು
ದೂರಿದರು 

ನಡೆಯಲು ಬಿಟ್ಟರು
ಮುಳ್ಳಿನ ಹಾದಿಯಲಿ 
ಎಡುವುತ್ತ ನಡೆಯುತಿಹನೆಂದು
ಮತ್ತೆ ದೂರಿದರು 
ಅವನ ಕಾಲಲ್ಲಿ
ಉಸುರುತ್ತಿದ್ದ ರಕ್ತವು ಕಾಣದೆ

ಹಾದಿ ಸಾಗಿದರೇನು ಬಂತು
ಕಾಲಿಂದ ಮೂಡಿದ್ದವು
ರಕ್ತ ಕಲೆಗಳ ಹೆಜ್ಜೆ ಗುರುತು
ಮರೆತುಬಿಡಲು ಹಳಸಿದನು
ಒಣಗಿ ಉಳಿದಿತ್ತು ರಕ್ತ ಚೆಲ್ಲಿದ ಹೆಜ್ಜೆ ನೆನಪು

Friday 3 May 2013

ಮೂಕ ಭಾಷೆ





"ಅಜ್ಜಿ... ತಾತ ಎಲ್ಲಿ???" 
ಊರಿಗೆ ಹೋಗಿ ಒಂದು ಗಂಟೆ ಆಗಿತ್ತು ... ಮನೆಯ ಎಲ್ಲರನ್ನು ಒಂದು ಕಡೆಯಿಂದ ಮಾತನಾಡಿಸಿಕೊಂಡು ಬಂದಿದ್ದೆ... ತಾತ ಮಾತ್ರ ಸಿಕ್ಕಿರಲಿಲ್ಲ... 
"ನಿಮ್ಮ ತಾತ ಮನೆಯಲ್ಲಿ ಸಿಕ್ಕುತ್ತಾ... ತೋಟಕ್ಕೆ ಹೋದರೆ ಅಲ್ಲಿ ಇರ್ತಾರೆ ನೋಡು, ಈಗ ತಾನೆ ನಿನ್ನ ಅಮ್ಮ,ಅಣ್ಣ  ಕೂಡ ತೋಟಕ್ಕೆ ಹೋದರು ನೋಡು... ನೀನು ಹೋಗು... ಅಲ್ಲಿ ಸಿಕ್ತಾರೆ " ಅಂತ ಹೇಳಿ ಅಜ್ಜಿ ಅವಳ ಕೆಲಸ ಮುಂದುವರೆಸಿದಳು... 
ನನ್ನ ಬಿಟ್ಟು ಅಗಲೆ ತೋಟಕ್ಕೆ ಹೊದ್ರ... ಅಂತ ಮನದಲ್ಲೇ ಹುಸಿ ಕೋಪ ಮಾಡಿಕೊಂಡು ನಾನು ತೋಟಕ್ಕೆ ಹೊರಟೆ.... ... 
ನಮ್ಮ ತೋಟ ಮನೆಯ ಪಕ್ಕದಲ್ಲೇ ಇತ್ತು... ತೋಟ ನೋಡುವ ಖುಷಿ.....
ತೋಟದ ಒಳಗೆ ಕಾಲಿಟ್ಟ ಮೊದಲ ಹೆಜ್ಜೆ ನನ್ನ ಮೊದಲ ನೋಟ ಅಲ್ಲೆ ಮೊದಲು ಎದುರುಗೊಳ್ಳುತಿದ್ದ ಒಂದಷ್ಟು ಹೂವಿನ ಗಿಡಗಳು, ಹಸಿರಾಗಿ ಬೆಳೆದು ನಿಲ್ಲುತಿದ್ದ ಜಾಗ ಕಂಡಿತು... ಹಸಿರ ರಾಶಿಗೆ  ನೀರು ಹಾಯಿಸುವ ಕಾಲುವೆಯಲ್ಲಿ ಗುಬ್ಬಚ್ಚಿ ಗೂಡುಗಳನ್ನ ಕಟ್ಟಿ ಆಡುತಿದ್ದ ನೆನಪಾಯ್ತು .... ಇಂದು ಹೂವಿನ ಗಿಡಗಲಳಿರಲಿಲ್ಲ.. ಅದರೆ ಅದರ ಸವಿ ನೆನಪು ಮಾತ್ರ ಹಸಿರಾಗಿತ್ತು.. ಆಗಾಗ ನೀರೆರೆದು ಪೋಷಿಸುತಿತ್ತು.. 
ಹಾಗೆ ಮುಂದೆ ಸಾಗಿದಾಗ ಕಂಡದ್ದು ಒಂದು ದೊಡ್ಡ ಬಂಡೆ.... ಅಜ್ಜಿ ಮತ್ತು ನಾವು ಒಂದಷ್ಟು ಮಕ್ಕಳು ಸೇರಿ ಪಗಡೆ ಆಡುತಿದ್ದ ಜಾಗ... 
ಅಕ್ಕ ಪಕ್ಕ ಅಡಕೆ ತೋಟದ ಸಾಲು... ಅದಕ್ಕೆ ನೀರು ಬಿಡುವ ಕರ್ತವ್ಯ ಇರುವಂತೆ ಹರಿಯುತಿದ್ದ ಕಾಲುವೆಗಳು ... 
ಹಾಗೆ ಬದಿಯಲ್ಲಿ ಕಂಡದ್ದು ಮುತ್ತಜ್ಜಿಯ ಸಮಾಧಿ .... ಅಜ್ಜಿಗೆ ನಮಸ್ಕರಿಸಿ ಮುಂದೆ ಹೊರಟೆ........ 
ಒಂದು ಕಾಲದಲ್ಲಿ ನೀರಿನಿಂದ ತುಂಬಿ ಹರ್ಷಿಸುತ್ತಿದ್ದ ಬಾವಿ ಕಂಡಿತು... ಇಣುಕಿ ನೋಡಿದೆ... ನೆಲದ ಮಟ್ಟದಲ್ಲಿ ಸ್ವಲ್ಪ ನೀರು ಕಂಡಿತು... 
ನಾನು ತಲುಪಬೇಕಾದ ಜಾಗ ಸಿಕ್ಕಿತ್ತು.. ಅಮ್ಮ ಅಣ್ಣ ಆಗಲೇ ಬಂದು ಕುಳಿತಿದ್ದರು....  
ಕೊಟ್ಟಿಗೆ ಇತ್ತು.... ತಾತ ಎಮ್ಮೆಗಳನ್ನು ಮತ್ತು ಹಸು ಗಳನ್ನು ಸಾಕಿದ್ದರು.... ತಾತನಿಗೆ ಒಬ್ಬ ಸಹಾಯಕ ಕೂಡ ಇದ್ದ... 
ತಾತ ಅಲ್ಲೆ ಹೊಂಡದಲ್ಲಿ ಹಸುಗಳಿಗೆ ಸ್ನಾನ ಮಾಡಿಸುತ್ತಿದ್ದರು.. ಆಗಾಗಿ ಅಲ್ಲೆ ಅಮ್ಮ ಅಣ್ಣನ ಪಕ್ಕ ಹೋಗಿ ಕುಳಿತೆ 
ನನ್ನ ದೂರದಿಂದಲೇ ನೋಡಿ ಮಾತನಾಡಿಸಿದರು... 
ಒಂದಷ್ಟು ವರ್ಷಗಳ ಹಿಂದೆ ಇದೇ ತಾತ ಮನೆಯಲ್ಲಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು... ಅಂಗಡಿ ಬಿಟ್ಟು ಕದಲುತ್ತಿರಲಿಲ್ಲ..  ಸಣ್ಣ ವಿಷಯಕ್ಕೆಲ್ಲ ಕೋಪಿಸಿಕೊಳ್ಳುತ್ತಿದ್ದ ತಾತನನ್ನು ಮಾತನಾಡಿಸುವ ದೈರ್ಯ ಆಗ ಇರಲ್ಲಿಲ್ಲ... ಆದರೆ ಈಗ ತಾತನ ನಡವಳಿಕೆ ಪೂರ್ತಿ ಬದಲಾಗಿತ್ತು... ಒಂದಷ್ಟು ಗಾಂಭಿರ್ಯ ಕಾಣುತಿತ್ತು... ಪ್ರೀತಿ ವಿಶ್ವಾಸ ಕಾಣುತ್ತಿತ್ತು .. ಎಲ್ಲಕಿಂತ ಒಂದಷ್ಟು ಮೌನಕ್ಕೆ ಶರಣಾಗಿದಂತೆ ಕಾಣುತ್ತಿದ್ದರು... 

ಹಸುಗಳಿಗೆ ಮೈ ತೊಳೆದು ನಮ್ಮನ್ನು ಮಾತನಾಡಿಸಲು ಬಂದರು... ಅಮ್ಮ ತಾತ ಉಭಯ ಕುಶಲೋಪರಿ ವಿಚ್ಚಾರಿಸಿಕೊಂಡು ಕುಳಿತರು.. ತೋಟದ ಬಗ್ಗೆ ಹಸುಗಳ ಬಗ್ಗೆ ಹೇಳಿದರು... 
ಇದನ್ನ ಕೇಳಿಸಿಕೊಳ್ಳುತಿದ್ದ ಅಣ್ಣ "ತಾತ ನಾನು ಸ್ವಲ್ಪ ಭೂಮಿ ತಗೊಂಡು ಕೃಷಿ ಕೆಲಸ ಮಾಡ್ಬೇಕು ಅಂತ ಆಸೆ" ಎಂದು ಹೇಳಿದ .... 
ತಕ್ಷಣ ಪಕ್ಕದಲ್ಲೇ ಕೂತಿದ್ದ ಅಮ್ಮ "ಏನಪ್ಪಾ .. ಓದಿರೋದು ಇಂಜಿನಿಯರಿಂಗ್.. ಇರೋದು ಬೆಂಗಳೂರನಲ್ಲಿ .. ನೀನು ಭೂಮಿ ತಗೊಂಡು ಕೃಷಿ ಕೆಲಸ ಮಾಡ್ತಿಯಾ ??" ಅಂತ ಆಡಿಕೊಂಡು ನಕ್ಕರು... 
"ಯಾಕ್ ಚಿಕ್ಕಮ್ಮ ನಗ್ತಿಯಾ?? "ಎಂದು ಪ್ರಶ್ನಾರ್ತಕವಾಗಿ ಅಮ್ಮನ ಮುಖ ನೋಡಿದ... 
"ಮತ್ ಇನ್ನೇನು .. ನಿನಗೆ ಏನ್ ಗೊತ್ತಾಗುತ್ತೆ ಉಳುಮೆಯ ಬಗ್ಗೆ.. ನೀನ್ ಉಳುಮೆ ಮಾಡಿದರೆ ಮುಗಿತು ಒಂದು ಚೀಲ ಕೂಡ ಸರಿಯಾಗಿ ಭತ್ತ ಸಿಗೋಲ್ಲ" ಎಂದು ನಕ್ಕಿದರು..
ಸುಮ್ಮನಿದ್ದ ಅಜ್ಜ "ಯಾಕಮ್ಮ ನಗ್ತೀಯಾ... ಉಳುಮೆ ಮಾಡುದು ಏನು ಕಷ್ಟ ಅಲ್ಲ.. ಒಂದಷ್ಟು ಶ್ರದ್ದೆ ಇರಬೇಕು... "
"ಉಳುಮೆ ಮಾಡಿಸಿಕೊಳ್ಳುವ ಭೂಮಿ ತಾಯಿನೇ ಎಲ್ಲ ಕಲಸ್ತಾಳೆ.... "
"ಈಗ ಮಳೆ ಬಂತು ಬೀಜ ಹಾಕು..."
"ಈಗ ಪೈರನ ತಗೊಂಡು ಭೂಮಿಯಲ್ಲಿ ಇಡು..."
" ನೀರು ಹಾಯಿಸು .."
"ಬೆಳೆದಿರೋ ಕಳೆನ  ಕಿತ್ತು ಸ್ವಚ್ಛ ಮಾಡು.. "
"ಗೊಬ್ಬರ ಬೇಕಾದಾಗ ಅವಳೇ ಕೇಳ್ತಾಳೆ "
"ಕೊನೆಗೆ ಬೆಳೆ ಬಂದಿದೆ ... ಈಗ ಕಿತ್ತು ... ಭತ್ತ ರಾಶಿ ಹಾಕು ಎಂದು ಅವಳೇ ಕೇಳಿ ಮಾಡಿಸಿಕೊಳ್ತಾಳೆ" ಅಂತ ಹೇಳಿದರು... 
ಮತ್ತೆ ಅಣ್ಣ ಅಜ್ಜನ ಮಾತು ಕೇಳುತ್ತ ಹಸುಗಳ ಕಡೆ ನೋಡಿದ... "ತಾತ , ನನಗೆ ಹಸುಗಳೆಂದರೆ ಇಷ್ಟ .. ಇಲ್ಲಿ ಒಂದು ಹಸು ಗೆ ಎಷ್ಟು ಬೆಲೆ?? ನನಗೆ ಹಸುಗಳನ್ನ ಸಾಕ ಬೇಕು ಅಂತ ಆಸೆ" ಎಂದು ಮತ್ತೆ ಅದೇ ಸ್ವರದಲ್ಲಿ ಹೇಳಿದ... 
ಇದನ್ನ ಕೇಳಿದ ಅಮ್ಮ ಮತ್ತೆ ಜೋರಾಗಿ ನಕ್ಕು " ಏನೋ .. ನೀನು ಹಸುಗಳನ್ನ ಕೊಂಡುಕೊಳ್ತಿಯಾ?? ನೀನು ಹಸು ಸಾಕ್ತಿಯ ?? ಅದಕ್ಕೆ ಯಾವಾಗ ಹುಲ್ಲು ಹಾಕಬೇಕು .. ಎಷ್ಟು ಹಾಕಬೇಕು ಅನ್ನೋದೆ ಗೊತ್ತಿಲ್ಲ.. ಅದಿರ್ಲಿ ಹಸುಗಳನ್ನ ಮನೆ ಪಕ್ಕ ಕಟ್ಕೊಳ್ತಿಯಾ??" ಅಂತ ಮತ್ತೊಮ್ಮೆ ಹಾಸ್ಯ ಮಾಡಿದರು... 
ಇದನ್ನು ಕೇಳಿಸಿ ಕೊಂಡ  ತಾತ " ಏನ್ ಇಲ್ಲಪ್ಪ .. ಹಸುನ ಸಾಕೊದೋ ಕಷ್ಟ ಅಲ್ಲ.. ಅದು ಗೋಮಾತೆ.. ಗೋತಾಯಿ ಅದೇ ನಮ್ಮನ್ನ ಕೇಳುತ್ತೆ... "
" ಹೊಟ್ಟೆ ಹಸಿದಾಗ 'ಅಂಬಾ....' ಅಂತ ಕೂಗಿ ಕರೆದು ಹುಲ್ಲು ಹಾಕು ಅಂತ ಹೇಳುತ್ತೆ... "
"ನೀರು ಬೇಕಾದಾಗ ಅದೇ ನೀರ ಹತ್ರ ಕರೆದು ಕೊಂಡು ಹೋಗುತ್ತೆ.. ನೀರು ಕುಡಿದು ತೃಪ್ತಿ ಆದ ನಂತರ ಮೈ ಉಜ್ಜಿ ತೃಪ್ತಿ ವ್ಯಕ್ತ ಪಡಿಸುತ್ತೆ.. "
"ಕೆಚ್ಚಲಲ್ಲಿ ಹಾಲು ತುಂಬಿದ್ದಲ್ಲಿ ಅದೇ ಕರಿಯುತ್ತೆ .. ಹಾಲು ಕರೆದುಕೋ ಎಂದು ಹೇಳುತ್ತೆ ..."
"ಅದು ಪ್ರಾಣಿ ಅದ್ರು .... ಅದರದೇ ಭಾಷೆಯಲ್ಲಿ ಕಲಿಸಿಕೊಡುತ್ತೆ .." ಅಂತ ಹೇಳುತ್ತಾ ಅಣ್ಣನ ಆಸೆ ತುಂಬಿದ್ದ ಕಣ್ಣುಗಳನ್ನ ನೋಡುತ್ತಾ ಅಣ್ಣನ  ಬೆನ್ನು ತಟ್ಟಿದರು... 
ಅಷ್ಟರಲ್ಲಿ ಹಸುವೊಂದು "ಅಂಬಾ ...." ಎಂದು ಕೂಗಿತು ... 
ತಾತ "ನೋಡು....  ತಾಯಿ ಕರಿತಾ ಇದಾಳೆ " ಅಂತ ಹೇಳಿ ನಕ್ಕು ಎದ್ದು ಒಂದಷ್ಟು ಹುಲ್ಲನ್ನು ಕೈಲಿ ಹಿಡಿದು ಹೊರಟರು .. 
ಹತ್ತಿರ ಬಂದ ಅಜ್ಜನ ಕೈಯಲ್ಲಿ ಸವರಿಸಿಕೊಳ್ಳುವುದಕ್ಕೆ ಮುಂದೆ ಬಂದವು .. 
ಅಜ್ಜನ ಮುಖ ಹಸುಗಳ ಶಾಂತ ಸ್ವಭಾವಾದಲ್ಲಿ ಲೀನವಾದಂತೆ ಕಂಡಿತು .... 
ಅವುಗಳ ಮೂಕ ಭಾಷೆ ಅರ್ಥವಾಗದೆ ನಾನು, ಅಮ್ಮ ,ಅಣ್ಣ ಸುಮ್ಮನೆ ನೋಡುತ್ತ ಕುಳಿತೆವು...... !!!!!